ಹೊಸ್ತೋಟ ಮಂಜುನಾಥ ಭಾಗವತರು ನೈಜ ಅವಧೂತರು: ಕಾಣಿಯೂರುಶ್ರೀ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಫೆಬ್ರವರಿ 16 , 2015
|
ಫೆಬ್ರವರಿ 16, 2015
|
ಹೊಸ್ತೋಟ ಮಂಜುನಾಥ ಭಾಗವತರು ನೈಜ ಅವಧೂತರು: ಕಾಣಿಯೂರುಶ್ರೀ
ಉಡುಪಿ :
ಯಕ್ಷಗಾನ ಕಲೆಯನ್ನು ವಿಶಿಷ್ಟವಾಗಿ ಪಸರಿಸಿ ಕಲೆಯ ಮಹತ್ವ ಎಲ್ಲರೂ ಅರಿಯುವಂತೆ ಮಾಡಿದ ಯಕ್ಷ ಗುರು ಹೊಸ್ತೋಟ ಮಂಜುನಾಥ ಭಾಗವತರು ನೈಜ ಅವಧೂತರು ಎಂದು ಪರ್ಯಾಯ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.
ಭಾನುವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉಡುಪಿಯ ಯಕ್ಷಗಾನ ಕಲಾರಂಗ, ಬೆಂಗಳೂರಿನ ಅನೇಕ-ನಾರಾಯಣ ಜೋಶಿ ಚಾರಿಟೇಬಲ್ ಟ್ರಸ್ಟ್, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಬೆಳೆಯೂರು ಹಾಗೂ ಯಕ್ಷಗಾನ ಕೇಂದ್ರ ಇಂದ್ರಾಳಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 'ಯಕ್ಷಗುರು ಹೊಸ್ತೋಟ ಮಂಜುನಾಥ ಭಾಗವತರಿಗೆ 75ರ ಸಂಭ್ರಮ ಉದ್ಘಾಟನೆ ಹಾಗೂ ಪುಸ್ತಕ ಬಿಡುಗಡೆ ಕಾಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಭಾಗವತರು ವರ್ಷದಲ್ಲಿ ಒಂದು ತಿಂಗಳು ಮೌನವ್ರತ ಪಾಲಿಸಿ ಪ್ರಸಂಗ ಬರೆಯುತ್ತಾರೆ ಎಂಬುದನ್ನು ಅರಿತಿದ್ದೇವೆ. ಮೌನವಾಗಿರುವುದು ಬಹಳ ಕಷ್ಟ. ಇಂತಹ ಕಷ್ಟಕರ ನಿಯಾಮಾವಳಿ ರೂಪಿಸಿಕೊಂಡು ಯಕ್ಷಗಾನದ ಬೆಳವಣಿಗೆಗೆ ಕೊಡುಗೆ ನೀಡುತ್ತಿರುವ ಹೊಸ್ತೋಟ ಮಂಜುನಾಥ ಭಾಗವತರು ನೈಜ ಅವಧೂತರು, ಸನ್ಮಾನ್ಯರು ಎಂದು ಅವರು ತಿಳಿಸಿದರು.
ಹೊಸ್ತೋಟ ಭಾಗವತರ 3 ಕೃತಿಗಳನ್ನು ಹಿರಿಯ ಕಲಾವಿದ ಕುಂಬ್ಳೆ ಸುಂದರ ರಾವ್ ಬಿಡುಗಡೆ ಮಾಡಿದರು. ಯುಕ್ಷಗಾನ ರಾಜ್ಯ ಕಲೆಯಾಗಬೇಕು. ಈ ನಿಟ್ಟಿನಲ್ಲಿ ಇದರ ಸೀಮೋಲ್ಲಂಘನ ನಡೆಯಬೇಕು ಎಂದರು. ರಾಜ್ಯಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ, ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿ ಮಾತನಾಡಿದರು.
ಅಧ್ಯಕ್ಷತೆಯನ್ನು ಇತಿಹಾಸ ಸಂಶೋಧಕ ಪ್ರೊ.ಷ.ಶೆಟ್ಟರ್ ವಹಿಸಿದ್ದರು. ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿ ಬೆಳೆಯೂರು ಸಂಚಾಲಕ ರಂಗನಾಥ ಬಿ., ಯಕ್ಷಗಾನ ಕೇಂದ್ರದ ನಿರ್ದೇಶಕ ಎಚ್.ಕೃಷ್ಣ ಭಟ್, ಅನೇಕ ಸಂಸ್ಥೆಯ ಪ್ರಕಾಶ ಜೋಶಿ, ಮಯೂರಿ ಉಪಾಧ್ಯಾಯ ಉಪಸ್ಥಿತರಿದ್ದರು.
ಹೊಸ್ತೋಟ ಭಾಗವತರ ಬಯಲಾಟದ ನೆನಪುಗಳನ್ನು ಹೊತ್ತ 'ಒಡಲಿನ ಮಡಿಲು-ಯಕ್ಷತಾರೆ', ಅನುಭವ ಕಥನ 'ಪವಾಡವಲ್ಲ -ವಿಸ್ಮಯ ' ಹಾಗೂ ಸಂಗ್ರಹ ಗ್ರಂಥ 'ಅಂತರ್ಮುಖ : ತಾಳಮದ್ದಲೆಯ ತಲ್ಲಣಗಳು ' ಕೃತಿ ಲೋಕಾರ್ಪಣೆ ನಡೆಯಿತು. ಯಕ್ಷಗಾನ ಕಲಾರಂಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅವರು ಸ್ವಾಗತಿಸಿ, ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರ ಮ ನಿರೂಪಿಸಿದರು.ದೇವೇಂದ್ರ ಬೆಳೆಯೂರು ಪ್ರಾಸ್ತಾವಿಕವಾಗಿ ಮಾತನಾಡಿ ಬಿ.ಜಿ.ಜಗದೀಶ್ ವಂದಿಸಿದರು.
'' ನನಗಿಷ್ಟವಾದ ವೃತ್ತಿಯನ್ನು ಆರಿಸಿ, ಬದುಕು ರೂಪಿಸುವ ವಿವೇಕ ನಾನು ಮಾಡಿದ್ದೇನೆಯೋ ಗೊತ್ತಿಲ್ಲ. ಹಿಂದೆ ವೇದಾಂತ ಕುರಿತು ಆಲೋಚಿಸಿದವನ್ನಲ್ಲ. ಸತ್ಯ-ಅಹಿಂಸೆಯಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಹುಡುಕಿ ಅದೇ ತೀರ್ಮಾನದಲ್ಲಿ ಬದುಕಿದವನು. ಸ್ವತಂತ್ರವಾಗಿ, ಸ್ವಾವಲಂಬಿಯಾಗಿ ನೆಮ್ಮದಿಯ ಬದುಕನ್ನು ಬಾಳುತ್ತಿದ್ದೇನೆ. 10 ವರ್ಷದಿಂದೀಚಿಗೆ ಸ್ವಂತದ ಬದುಕಲ್ಲಿ (ಇಲ್ಲಿ ಸ್ವಂತ ಶಬ್ದದ 'ವ' ಒತ್ತಾಕ್ಷರ ತೆಗೆದರೆ ಸಂತ ಆಗುತ್ತದೆಯಲ್ಲವೇ?) ಅಂತರ್ಮುಖಿಯಾಗಿ ಅಧ್ಯಾತ್ಮವನ್ನು ಪ್ರವೃತ್ತಿಯನ್ನಾಗಿ ಹಾಗೂ ಯಕ್ಷಗಾನವನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದೇನೆ.'' - ಹೊಸ್ತೋಟ ಮಂಜುನಾಥ ಭಾಗವತರು
ಕೃಪೆ :
http://vijaykarnataka.com
|
|
|